ಲೇಖಕರು: ಶ್ರೀ ಗೋಪಾಲಕೃಷ್ಣ ಪೈ
ಪ್ರಕಾಶಕರು: ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು
ಬೆಲೆ: ರೂ; ೩೨೫
"ಸ್ವಪ್ನ ಸಾರಸ್ವತ’’ವನ್ನು ಓದಿ ಇದನ್ನು ಬರೆಯುತ್ತಿದ್ದೇನೆ. ಮೊದಲನೆಯದಾಗಿ ಈ ಅದ್ಭುತ ಸಾಧನೆಗಾಗಿ ಲೇಖಕ ಶ್ರೀ ಗೋಪಾಲಕೃಷ್ಣ ಪೈಯವರಿಗೆ ಅಭಿನಂದನೆಗಳು! ೪೭೦ ಪುಟಗಳಷ್ಟು ದೀರ್ಘವಾದ ಕಾದಂಬರಿಯನ್ನು ನಿಧಾನವಾಗಿ ಆಸ್ವಾದಿಸುತ್ತಾ ಓದಲು ಮೂರು ವಾರ ತೆಗೆದುಕೊಂಡೆ.
ಈ ಕಾದಂಬರಿಗಾಗಿ ಪೈ ಅವರು ಹಲವಾರು ವರ್ಷಗಳ ಕಾಲ ಸಂಶೋಧನಾ ಕಾರ್ಯ ಮಾಡಿದ್ದು ಅಚ್ಚರಿಯಲ್ಲ! ಅದಿಲ್ಲದೆ ಇಂತಹ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಸೃಜನಾತ್ಮಕ ಕಾದಂಬರಿಯನ್ನು ಸೃಷ್ಟಿಸಲು ಅಸಾಧ್ಯ. ಕಥನ ತಂತ್ರ (ಅಜ್ಜ ಮೊಮ್ಮಗನಿಗೆ ವಂಶದ ಕತೆ ಹೇಳುವುದು) ಉತ್ತಮವಾಗಿದೆ. ಈ ಕಾದಂಬರಿಯನ್ನು ಓದುವಾಗ ಓದುಗರಿಗೆ ಭೈರಪ್ಪನವರ ನೆನಪಾಗಿಯೇ ಆಗುತ್ತದೆ. ಆವರಣದಲ್ಲಿ ಇಂತಹದೇ ಇನ್ನೊಂದು ತಂತ್ರವನ್ನು ಬಳಸಿದ್ದಾರೆ. ಬೈರಪ್ಪನವರು ಆಧಾರ ಗ್ರಂಥಗಳನ್ನೂ ಹೆಸರಿಸಿದ್ದಾರೆ. ಇಲ್ಲಿ ಅದರ ಅಗತ್ಯವಿಲ್ಲ. ಪ್ರಥಮ ಕಾದಂಬರಿಗೇ ಬುಕರ್ ಪ್ರಶಸ್ತಿ ಗಳಿಸಿದ ಅರವಿಂದ ಅಡಿಗರ White Tigerನಲ್ಲಿ ಭಾರತಕ್ಕೆ ಭೇಟಿ ಕೊಡಲಿರುವ ಚೀನಾದ ಪ್ರಧಾನಿಗೆ ಭಾರತದ ಸ್ಥಿತಿಗತಿಗಳ ಬಗ್ಗೆ ಪತ್ರ ಬರೆಯುವ ಮೂಲಕ ಕತೆ ಹೇಳಿಸುವುದೇ ತಂತ್ರ. (ಈ ಕಾದಂಬರಿಗೆ ಹೇಗೆ ಮತ್ತು ಏಕೆ ಪ್ರಶಸ್ತಿ ಬಂತೆಂದು ಗೊತ್ತಿಲ್ಲ.)
ಪೈ ಅವರ ಕಥನ ರೀತಿ ಮತ್ತು ಶೈಲಿ ಆಸಕ್ತಿ ಹುಟ್ಟಿಸುವಂತದ್ದು; ವ್ಯಕ್ತಿ ಚಿತ್ರಣ ವ್ಯಕ್ತಿಗಳನ್ನು ನಮ್ಮೆದುರೇ ತಂದು ನಿಲ್ಲಿಸುತ್ತದೆ. ಕಥಾ ವಸ್ತು (ಒಂದು ಸಮಾಜ - ಸಾರಸ್ವತ - ದ ವಲಸೆ) ವಿನೂತನ ಮತ್ತು ಕುತೂಹಲದಾಯಕ. ಉತ್ತರದಿಂದ ದಕ್ಷಿಣಕ್ಕೆ ನದಿಯ ಪ್ರವಾಹದಂತೆ ಸಾಗುವ ಕತೆಯಲ್ಲಿ ಬರುವ ವ್ಯಕ್ತಿಗಳ ಸಂಖ್ಯೆ ಬಹು ದೊಡ್ಡದು. ಮೂರ್ನಾಲ್ಕು ತಲೆಮಾರುಗಳ ವ್ಯಕ್ತಿಗಳನ್ನೂ, ಅವರೊಳಗಿನ ಸಂಬಂಧಗಳನ್ನೂ ನೆನಪಿಟ್ಟುಕೊಂಡು ಮುಂದುವರಿಯುವುದು ಓದುಗನಿಗೆ ಸುಲಭವಲ್ಲ! ಕತೆಗಾರನಿಗೆಂತೋ!! ಈ ಪ್ರವಾಹದ ಕವಲುಗಳು ಅನೇಕ ಇರಬಹುದು. ಒಂದು ಕವಲು ಬಳ್ಳಂಬೆಟ್ಟಿಗೆ ಸಾಗುತ್ತದೆ.
೧. ಪೈ ಅವರ ಸಮಾಜ(ಕೊಂಕಣಿಗರು)ದವರನ್ನು ಗೌಡ ಸಾರಸ್ವತರೆನ್ನುತ್ತಾರಷ್ಟೆ? ಇದು ಸಾರಸ್ವತರ ಒಂದು ಪಂಗಡ. ಈ ಹೆಸರಿನಲ್ಲಿರುವ ’ಗೌಡ’ ಹೇಗೆ ಬಂತು? ಗೌಡ ಸಾರಸ್ವತ ಎಂಬ ಪದವನ್ನು ಕಾದಂಬರಿಯಲ್ಲಿ ಬಳಸಿಯೇ ಇಲ್ಲ.
೨. "ಸ್ವಪ್ನ ಸಾರಸ್ವತ" ಎಂಬ ಶೀರ್ಷಿಕೆಯ ಅರ್ಥ, ಮಹತ್ವ ಗೊತ್ತಾಗಲಿಲ್ಲ. ಇಲ್ಲಿ ಸ್ವಪ್ನ ಯಾಕೆ ಬಂತು?
೩. ನಾಗ್ಡೋ ಬೇತಾಳ ಮತ್ತು ಧಡ್ಡ ಲೇಖಕನ ಕಲ್ಪನೆಯ ಕೂಸುಗಳೋ ಅಥವಾ ಸಾರಸ್ವತ ಸಮಾಜದ ಪಾರಂಪರಿಕ ನಂಬಿಕೆಗಳೋ? (ನಂಬಿಕೆಗಳಾಗಿರಬಹುದೆಂದು ನಂಬುತ್ತೇನೆ). ಧಾರ್ಮಿಕ ಕಾರ್ಯಗಳಲ್ಲಿ ಧಡ್ಡನಿಗೆ (ಧಡ್ಡ ದಡ್ಡನಲ್ಲವೇ?) ಒಂದು ಮಣೆ ನೀಡುತ್ತಾರೆ ಎಂದಿದೆ. ಈ ಸಂಪ್ರದಾಯ ಈಗಲೂ ಇದೆಯೇ?
೪. "ಬಳ್ಳಂಬೀಡು" (ಬಳ್ಳಂಬೆಟ್ಟು ಅಲ್ಲ) ಮತ್ತು ಬಲ್ಲಾಳ ಅರಸು ಕಲ್ಪನೆಯಲ್ಲವೇ? ಅಲ್ಲಲ್ಲಿ ಸ್ಥಳೀಯ ಅರಸುಗಳ ಪ್ರಸ್ತಾಪ (ಉದಾಹರಣೆಗೆ ಬೇಳದ ಅರಸು, ಪಟ್ಟಾಜೆ ಅರಸು ಇತ್ಯಾದಿ)ವಿದೆ. ಇದು ಐತಿಹಾಸಿಕ ಸತ್ಯವೇ, ಗೊತ್ತಿಲ್ಲ.
೫. ನನಗೆ ಮೊದಲೇ ಇದ್ದ ಸಂಶಯಗಳಾದ ಯಾಕೆ ಕೊಂಕಣಿಗರು ಹಿರಿಯರನ್ನು ಮಾಮ್ ಮತ್ತು ಮಾಯಿ ಎಂದು ಸಂಭೋದಿಸುತ್ತಾರೆ, ಪ್ರತ್ಯೇಕ ದೇವಸ್ಥಾನಗಳನ್ನು ಕಟ್ಟಿಸುತ್ತಾರೆ, ಇತ್ಯಾದಿಗಳಿಗೆ ಉತ್ತರ ಸಿಕ್ಕಿತು. "ನಿಮ್ಮ ಜನ, ನಿಮ್ಮ ಭಾಷೆ" ಎಂದಿಗೂ ಬಿಡಬೇಡಿ ಎಂಬುದು ನಾಗ್ಡೋ ಬೇತಾಳನ ಆದೇಶವೆಂಬ ಮಾತು ಹಲವು ಸಲ ಬಂದಿದೆ.
೬. ಹಲವು ದಶಕಗಳ ಕಾಲ ದಕ್ಷಿಣ ಕನ್ನಡದಿಂದ ಹೊರಗೆಯೇ ಇದ್ದ ಪೈ ಅವರ ಬರವಣಿಗೆಯ ಭಾಷೆಯ ಮೇಲೆ ಇದರ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು. ಕೆಲವು ಕಡೆ ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳೂ, ಇನ್ನು ಕೆಲವು ಕಡೆ ಬೇರೆ (ಇತರ ಕಡೆ ಬಳಕೆಯಲ್ಲಿರುವ) ಪದಗಳೂ ಕಾಣುತ್ತವೆ.
ಚೆಂದದ ಕಾದಂಬರಿಗೆ ಚೆಂದದ ಬೆನ್ನುಡಿ.
ReplyDelete"ಸ್ವಪ್ನ ಸಾರಸ್ವತ"ದ ಬಗ್ಗೆ ಕೇಳಿದ್ದೇನೆ. ಓದಬೇಕೆಂದಿದ್ದೆ, ಓದಲಾಗಿಲ್ಲ.
ನಿಮ್ಮ ಈ ಬರಹದ ಮೂಲಕ ಓದಬೇಕೆಂಬ ಕುತೂಹಲ ಇಮ್ಮಡಿಯಾಗಿದೆ.
ಬರಹಧಾರೆ ಮುಂದುವರಿಯಲಿ.
ನಮಸ್ಕಾರ.
Interesting review, Udaya maava.
ReplyDeleteWelcome to the world of blogging. Wish you a wonderful journey:)